Friday, February 10, 2017

ತೂಗುಮಂಚದಲ್ಲಿ ಕೂತು



krishna radha ಗೆ ಚಿತ್ರದ ಫಲಿತಾಂಶ

ಕವಿ: ಹೆಚ್.ಎಸ್. ವೆಂಕಟೇಶ ಮೂರ್ತಿ
ಸಂಗೀತ: ಸಿ. ಅಶ್ವತ್ಥ್
ಗಾಯನ : ರತ್ನಮಾಲಾ ಪ್ರಕಾಶ್
ಚಿತ್ರದಲ್ಲಿ ಅಡವಳಿಕೆ: ಕಿರಿಕ್ ಪಾರ್ಟಿ
ಗಾಯನ : ಸಂಗೀತ ರವೀಂದ್ರನಾಥ್
ಸಂಗೀತ : ಅಜನೀಶ್ ಲೋಕನಾಥ್



ತೂಗುಮಂಚದಲ್ಲಿ ಕೂತು, ಮೇಘಶಾಮ ರಾಧೆಗಾತು ಆಡುತಿಹನು ಏನೋ ಮಾತು, ರಾಧೆ ನಾಚುತಿದ್ದಳು ||
ಸೆರಗ ಬೆರಳಿನಲ್ಲಿ ಸುತ್ತಿ, ಜಡೆಯ ತುದಿಯ ಕೆನ್ನೆಗೊತ್ತಿ ಜುಮ್ಮುಗುಡುವ ಮುಖವನೆತ್ತಿ, ಕಣ್ಣ ಮುಚ್ಚುತ್ತಿದ್ದಳು ||

ತೂಗುಮಂಚದಲ್ಲಿ ಕೂತು ....

ಮುಖವ ಎದೆಯ ನಡುವೆ ಒತ್ತಿ, ತೋಳಿನಿಂದ ಕೊರಳ ಸುತ್ತಿ ತುಟಿಯು ತೀಡಿ ಬೆಂಕಿ ಹೊತ್ತಿ, ಹಮ್ಮನುಸಿರ ಬಿಟ್ಟಳು ||
ಸೆರಗು ಜಾರುತಿರಲು ಕೆಳಗೆ, ಬಾನು ಭೂಮಿ ಮೇಲು ಕೆಳಗೆ ಅದುರುತಿರುವ ಅಧರಗಳಿಗೆ, ಬೆಳ್ಳಿ ಹಾಲ ಬಟ್ಟಲು ||

ತೂಗುಮಂಚದಲ್ಲಿ ಕೂತು ....
ಚಾಚುತಿರಲು ಅರಳಿದರಳು, ಯಮುನೆಯೆಡೆಗೆ ಚಂದ್ರ ಬರಲು ಮೇಲೆ ತಾರೆಗಣ್ಣ ಹೊರಳು, ಹಾಯಿ ದೋಣಿ ತೇಲಿತು ।।
ತನಗೆ ತಾನೇ ತೂಗುಮಂಚ, ತಾಗುತ್ತಿತ್ತು ದೂರದಂಚ ತೆಗೆಯೊ ಗರುಡ ನಿನ್ನ ಚೊಂಚ, ಹಾಲು ಗಡಿಗೆ ಹೇಳಿತು ।।

No comments: